ಸರ್ವಿಸ್ನಲ್ಲಿ ತಡವಾಗಿದೆ ಎಂದು ದರ್ಶನ್ ಕೋಪಗೊಂಡರು, ಆದರೆ ನನ್ನ ಮೇಲೆ ದರ್ಶನ್ ಹಲ್ಲೆ ಮಾಡಿಲ್ಲ | ಜನತಾ ನ್ಯೂಸ್
ಮೈಸೂರು : ನನ್ನ ಮೇಲೆ ನಟ ದರ್ಶನ್ ಹಲ್ಲೆ ಮಾಡಿಲ್ಲ. ಸರ್ವಿಸ್ನಲ್ಲಿ ತಡ ಆಗಿದ್ದಕ್ಕೆ ಬೈದರು ಅಷ್ಟೇ ಎಂದು ಹಲ್ಲೆ ಆರೋಪಕ್ಕೆ ಹೋಟೆಲ್ ಸಪ್ಲೈಯರ್ ಗಂಗಾಧರ್ ಹೇಳಿಕೆ ನೀಡಿದರು.
ಸ್ಯಾಂಡಲ್ ವುಡ್ ನಟ ದರ್ಶನ್ ಮೈಸೂರಿನ ಸಂದೇಶ ಪ್ರಿನ್ಸ್ ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರು ಎಂಬ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪಕ್ಕೆ ಸಂಬಂಧಪಟ್ಟಂತೆ ಇಂದು ಬೆಳಿಗ್ಗೆ ಹೋಟೆಲ್ ಗೆ ಧಾವಿಸಿದ ಪೊಲೀಸರು ಸಂದೇಶ್ ಪ್ರಿನ್ಸ್ ಹೋಟೆಲ್ ಸಿಬ್ಬಂದಿಗಳಾದ ಗಂಗಾಧರ್, ಸಮೀರ್, ಪ್ರಸನ್ನ ಮತ್ತು ಆಕಾಶ್ ಎಂಬುವವರನ್ನ ವಿಚಾರಣೆ ಮಾಡಿದ್ದಾರೆ.
ನಟ ದರ್ಶನ್ ದಿ ಸಂದೇಶ್ ಪ್ರಿನ್ಸ್ ಹೋಟೆಲ್ನಲ್ಲಿ ಗಂಗಾಧರ್ ಎಂಬ ಸರ್ವಿಸ್ ಮಾಡುವ ವ್ಯಕ್ತಿಯ ಮೇಲೆ ದೃಷ್ಟಿ ಹೋಗುವ ರೀತಿ ಹೊಡೆದಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಇತ್ತೀಚೆಗೆ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಹೋಟೆಲ್ಗೆ ಆಗಮಿಸಿದ ಎಸಿಪಿ ಶಶಿಧರ್ ನೇತೃತ್ವದ ತಂಡ ಗಂಗಾಧರ್ ಎಂಬ ವ್ಯಕ್ತಿಯಿಂದ ಮಾಹಿತಿ ಪಡೆದರು.
ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿರುವ ಗಂಗಾಧರ್ ಮಾತನಾಡಿ, ಮೊದಲಾಗಿ ನಾನು ದಲಿತನಲ್ಲ. ಕೇರಳದ ನಾಯರ್ ಜನಾಂಗಕ್ಕೆ ಸೇರಿದವನಾಗಿದ್ದೇನೆ. ಘಟನೆ ನಡೆದ ದಿನ ಸರ್ವಿಸ್ನಲ್ಲಿ ತಡವಾಗಿದೆ ಎಂದು ದರ್ಶನ್ ಕೋಪಗೊಂಡರು, ಆದರೆ ಯಾರ ಮೇಲೂ ಹಲ್ಲೆ ಮಾಡಿಲ್ಲ ಎಂದರು.
ಅಂದಹಾಗೆ ಇಂದ್ರಜಿತ್ ಲಂಕೇಶ್ ಹೇಳಿದ ಪ್ರಕಾರ ಇದೆ ಗಂಗಾಧರ ಅವರ ಮೇಲೆ ದರ್ಶನ್ ಹಲ್ಲೆ ಮಾಡಿದ್ದರು, ಮರುದಿನ ಗಂಗಾಧರ್ ಅವರ ಹೆಂಡ್ತಿ ಪೊರಕೆ ಹಿಡಿದು ದರ್ಶನ್ ಮತ್ತು ಸ್ನೇಹಿತರನ್ನ ಪ್ರಶ್ನಿಸಲು ಹೋಟೆಲ್ ಗೆ ಬಂದಿದ್ದರು ಎಂದು ಆರೋಪಿಸಿದ್ದರು. ಆದರೆ ಈಗ ಮಾಧ್ಯಮದ ಮುಂದೆ ಖುದ್ದು ಸತ್ಯ ಬಿಚ್ಚಿಟಿರುವ ಗಂಗಾಧರ್ ನಾನು ಬ್ಯಾಚಲರ್ ಅದು ಯಾವ ಹೆಂಡ್ತಿ ಪೊರಕೆ ಹಿಡಿದುಕೊಂಡು ಬಂದಿದ್ದರೋ ಗೊತ್ತಿಲ್ಲ ಎಂದು ಹೇಳಿದ್ದಾರೆ